ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ DCREಯಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ ಕೇಳಿಬಂದಿದೆ. ಮೇಲ್ಜಾತಿ ಆರೋಪಿಗಳ ಪರ ವರದಿ ನೀಡಲು ಒತ್ತಡ ಹೇರಲಾಗುತ್ತಿದೆ ಎಂದು SP ಕರಿಬಸನಗೌಡ ಹಾಗೂ DySP ಮಹೇಶ್ವರಗೌಡ ವಿರುದ್ಧ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಎಂಬವರು ದೂರು ನೀಡಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕೇಸ್ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ (DCRE) ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ ಕೇಳಿಬಂದಿದೆ. DCRE ಕೇಂದ್ರ ಕಚೇರಿ SP ಕರಿಬಸನಗೌಡ ಹಾಗೂ DySP ಮಹೇಶ್ವರಗೌಡ ಮೇಲೆ ಆರೋಪ ಮಾಡಲಾಗಿದ್ದು, ಈ ಬಗ್ಗೆ ಪಶ್ಚಿಮ ವಲಯ DCRE ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇರವಾಗಿ DCRE ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಅಷ್ಟಲ್ಲದೆ ಈ ಬಗ್ಗೆ ಶ್ರೀನಿವಾಸ್ ವೀಡಿಯೋ ಕೂಡ ಮಾಡಿದ್ದು,ಮೇಲ್ವರ್ಗದ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಕಿರುಕುಳ ನೀಡಲಾಗ್ತಿದೆ. SP ಕರಿಬಸನಗೌಡ ನಿರ್ದೇಶನದಂತೆ ಕೆಲ ಕೇಸ್​​ಗಳಲ್ಲಿ ಮೇಲ್ಜಾತಿ ಆರೋಪಿಗಳ ಪರ ಅಂತಿಮ ವರದಿ ಸಲ್ಲಿಸಲು DySP ಒತ್ತಡ ಹಾಕುತ್ತಿದ್ದರು. ಆ ವೇಳೆ ವಲಯ SP ಅವರಿಂದ ನಿರ್ದೇಶನ ಕೊಡಿಸುವಂತೆ ಹೇಳಿದ್ದ ಕಾರಣ ಅಂದಿನಿಂದ Dysp ಮತ್ತು SP ಕರಿಬಸನಗೌಡ ಕಿರುಕುಳ ನೀಡುತ್ತಿದ್ದಾರೆ. ದೂರುದಾರರಿಂದ ತನ್ನ ವಿರುದ್ಧ ಸುಳ್ಳು ಪಿಟಿಷನ್ ಪಡೆದು ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ಕಳೆದ ತಿಂಗಳು ಶ್ರೀನಿವಾಸ್​​ರನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ KATನಲ್ಲಿ ಅದಕ್ಕೆ ಅವರು ಸ್ಟೇ ತಂದಿದ್ದರು. ಆದರೂ ನಕಲಿ ದಾಖಲೆ ಸೃಷ್ಟಿಸಿ ಷಡ್ಯಂತ್ರ ಮಾಡಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆಂದು ಆರೋಪಿಸಲಾಗಿದೆ. ಈ ರೀತಿ ಕಿರುಕುಳ ನಿಲ್ಲದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯೂ ಅವರಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *